ಗುರುವಾರ, ಫೆಬ್ರವರಿ 4, 2010

ಮಾಯಾಮೃಗದ ಬೆನ್ನೇರಿ ಹೊರಟವನ ಕಥೆ..:(

  ಓಡಿಸುತಿದ್ದ ಸೈಕಲ್ ಫಕ್ಕನೆ ಹಿಡಿತ ಕಳಕೊಂಡಿತು, ಏನಾಯಿತೆಂದು ನೋಡಿದರೆ ಹಿಂದಗಡೆ ಅವನು ಸೈಕಲ್ ಮೇಲೆ ಎಗರಿ ಕುಳಿತಿದ್ದ! "ಬೇಗ ಓಡಿಸು ಕಿರಣ್"
"ಯಾಕೋ?"
"ಬೇಗ ಓಡಿಸು"
"ಅದೇ ಯಾಕೆ?"
''ಅವರು ಅಟ್ಟಿಸಿಕೊಂಡು ಬರುತಿದ್ದಾರೆ"
"ಯಾರು?"
"ಅಂಗಡಿಯವರು"
"ಯಾಕೆ?"
"ನನ್ನ ಹಿಡಿಯೋಕೆ"
"ಏನಾಯಿತು?"
"ಅವರ ಅಂಗಡಿಯ ಗಣೇಶ ಎತ್ತಿಕೊಂಡು ಬಂದಿದ್ದೀನಿ"
ಅಷ್ಟರಲ್ಲಿ ಅವರು ನಮಗಿಂತ ಕೇವಲ ೫ ಅಡಿ ಹಿಂದೆ ಇದ್ದರು, ಅದನ್ನು ಕಂಡು ಅವನು ಕೆಳಗೆ ಇಳಿದು ಓಡಿ ಬಿಟ್ಟನು..!
ಅವರು ಕೇಳಿದರು " ಅವನ ಹೆಸರೇನು?"
"v ನ" (ಹೆಸರು ಬದಲಾಯಿಸಿದೆ)
"ಸರಿ ನಿಮ್ಮ principal ಜೊತೆ ಮಾತಾಡ್ತೀನಿ, ನೀನು ಹೋಗು.."
ಅದು teachers day ಗೆ ಅಂತ ನಾವು ಕ್ಲಾಸಿನವರೆಲ್ಲ shopping ಮಾಡೋದಕ್ಕೆ ಹೋಗಿದ್ದೆವು, ಎಲ್ಲಾ ಮುಗಿಸಿ ಹಿಂತಿರುಗುತಿದ್ದಾಗ ಆದ ಘಟನೆ.
ಅವನು ಇರುತ್ತಿದುದೇ ಹಾಗೆ, ಯಾವಾಗ, ಯಾರ ಜೊತೆ ಹೇಗೆ ವರ್ತಿಸುತ್ತನೆಂದು ಊಹಿಸುವುದು ಕಷ್ಟವಾಗಿತ್ತು.
ಅವನ ಮನೆ ನಮ್ಮ ಶಾಲೆಗೆ ತುಂಬಾ ಹತ್ತಿರವಿತ್ತು, ಮತ್ತೆ ಅವನ ತಂದೆ ಪೋಲಿಸ್ ಆಗಿದ್ದರು.
ಅವನು ನಮ್ಮ ಶಾಲೆಗೆ ಬಂದು ಸೇರಿದ್ದು ನಾನು 3 ನೆ ಕ್ಲಾಸಿನಲ್ಲಿದ್ದಾಗ, ಉದ್ದಕ್ಕೆ ಎತ್ತರವಾಗಿದ್ದ ಅವನು ಕಪ್ಪಗಿದ್ದನು.
ಬಂದ ಮೊದಲ ದಿನವೇ class ಗೆ ನುಗ್ಗಿದ ಅವನಷ್ಟೇ ದಪ್ಪಗಿದ್ದ ಒಂದು ಕರಿ ಹೆಗ್ಗಣವನ್ನು ಕೇವಲ ಒಂದು ಆಟದ ಸಾಮಾನಿನಂತೆ ಅದರ ಬಾಲವನ್ನು ಹಿಡಿದೆತ್ತಿ ಆಚೆ ಬಿಸಾಕಿದ್ದ, ಮತ್ತು ನಮ್ಮೆಲ್ಲರ ಪಾಲಿಗೆ hero ಆಗಿಬಿಟ್ಟಿದ್ದ.
ಹೀಗೆ ಬಂದು ನಮ್ಮ ಗುಂಪಿಗೆ ಸೇರಿದ ಅವನು ನಮ್ಮ ಶಾಲೆಯಲ್ಲಿ ಇದ್ದಷ್ಟು ದಿನವೂ ಒಂದಿಲ್ಲೊಂದು ಗಲಾಟೆ ಮಾಡಿ ದೊಂಬಿ ಎಬ್ಬಿಸುತ್ತಿದ್ದ. ನಮ್ಮ ಕ್ಲಾಸ್ ನ ಕಿಟಕಿಗೆ ಎದುರಾಗಿ ಒಂದು carpenter ಅಂಗಡಿ ಇತ್ತು, ಇವನು ಆ ಅಂಗಡಿಯವನನ್ನು ಪರಿಚಯಿಸಿಕೊಂಡು ಅವನ ಬಳಿಯಿದ್ದ music system ನ ಸೌಂಡು ಜಾಸ್ತಿ ಮಾಡುವಂತೆ ಪುಸಲಾಯಿಸಿದ್ದ! ಸರಿ ನಮ್ಮ ಕ್ಲಾಸ್ ನ ಹುಡುಗರೆಲ್ಲ ಪಾಟವನ್ನು ಕೇಳುವುದು ಬಿಟ್ಟು ಎಲ್ಲರೂ ಕಿಟಕಿಗೆ ಕಿವಿಯೊಡ್ಡಿದರು. ಇದು ಹೇಗೋ ನಮ್ಮ ಪ್ರಿನ್ಸಿಯ ಕಿವಿಗೆ ಬಿದ್ದು ಅವನ  ಅಪ್ಪನನ್ನು ಕರೆದು ಒಂದು ದೊಡ್ಡ ಹಗರಣ ಮಾಡಿದರು....
ಅವನು ನಮ್ಮ ಕ್ಲಾಸ್ ನ ಹುಡುಗಿಯರನ್ನು ಹೆದರಿಸಲು ಜೇಬಿನಲ್ಲಿ ಜಿರಳೆಗಳನ್ನು ಹಿಡಿದು ತರುತಿದ್ದ!
ಶಾಲೆಯ ಅಟ್ಟದ ಮೇಲೆ ಕೂರುತಿದ್ದ ಪಾರಿವಾಳಗಳನ್ನು ಕಿಟಕಿಯ ಮೇಲೆ ಹತ್ತಿ ಹಿಡಿಯಲು ಪ್ರಯತ್ನಿಸಿ ನಮ್ಮನ್ನು ಚಕಿತಗೊಳಿಸುತ್ತಿದ್ದ.
ಒಂದು ಸಲ ದೀಪಾವಳಿಯ ಸಂದರ್ಭದಲ್ಲಿ ಊದುಭತ್ತಿಗೆ ಪಟಾಕಿ ಸಿಕ್ಕಿಸಿ ಕ್ಲಾಸ್ ನ tube light ಒಡೆದು ಹಾಕಿದ್ದ!!
ಮನೆಯಲ್ಲಿ ಕೋಳಿಗಳನ್ನು, ಪಾರಿವಾಳಗಳನ್ನು, ನಾಯಿಗಳನ್ನು ಸಾಕಿಕೊಂಡಿದ್ದ, ಮತ್ತು ನಮ್ಮೆಲ್ಲರನ್ನೂ ಕರೆದುಕೊಂಡು ಹೋಗಿ ಅವುಗಳನ್ನು ಪರಿಚಯಿಸಿ(!) ಅವುಗಳ ಜಾತಿ ವಿಶೇಷತೆಗಳ ಬಗ್ಗೆ ಕೊರೆಯುತ್ತಿದ್ದ.
ತನಗೆ ಗೊತ್ತಿದ್ದ ಭೂಗತ ಜಗತ್ತಿನವರ ಕಥೆಗಳನ್ನು ರಸವತ್ತಾಗಿ ನಮಗೆ ವಿವರಿಸುತ್ತಿದ್ದ. ಅಲ್ಲಿ ಆ ನಿಷಿದ್ದ, ಕತ್ತಲ, ಮೋಸದ ಜಗತ್ತಿನಲ್ಲಿ ತುಂಬಾ ದುಡ್ಡಿದೆ ಅನ್ನುತ್ತಿದ.
ಆದರೆ ಅವನ ಈ ರೀತಿಯ ಚಟುವಟಿಕೆಗಳು ಇಷ್ಟಕ್ಕೇ ಸೀಮಿತವಾಗಿರದೆ ಆ ಜಗತ್ತಿಗೂ ಕೈ ಹಾಕಿದ್ದ.
ದುಡ್ಡನ್ನು ಬಡ್ಡಿಗೆ ಬಿಟ್ಟಿದ್ದ.
ಕತ್ತಲ  ಜಗತ್ತಿನೊಳಗೆ  ಹಿಂದಿರುಗಲಾರದಷ್ಟು ದೂರ ಸಾಗಿದ್ದ.
ಒಂದು ದಿನ ಬೆಳಗ್ಗೆ ನನ್ನ ಅಮ್ಮ ನನಗೆ ದಿನ ಪತ್ರಿಕೆ ತೋರಿಸಿದರು-ಅವನು ಕೊಲೆಯಾಗಿ ಹೋಗಿದ್ದ!
ಎತ್ತರಕ್ಕೆ ಉತ್ತಮವಾಗಿ ದೇಹವನ್ನು build ಮಾಡಿಕೊಂಡು ಚಿರತೆಯಷ್ಟು ಚುರುಕಾಗಿದ್ದವನನ್ನು ನಾಲ್ಕಾರು ಜನ ಸಿನಿಮಾ ಶೈಲಿಯಲ್ಲಿ ಅಟ್ಟಿಸಿಕೊಂಡು ಹೋಗಿ ಕಣ್ಣಿಗೆ ಕಾರದ ಪುಡಿ ಎರಚಿ ಹೊಡೆದಿದ್ದರು.
ನನಗೆ ಅವನು ಕಡೆಯ ಬಾರಿ ಸಿಕ್ಕಿದ್ದಾಗ ಹೀಗೆ ಕೇಳಿದ್ದ-
" ನೀವು ಬ್ರಾಹ್ಮಣರು ಯಾಕೆ ಪ್ರಾಣಿಗಳನ್ನು ತಿನ್ನಲ್ಲ? ಹಿಂಸೆ ಅಂತಾನ? ಆದರೆ ಗಿಡ ಮರಗಳಿಗೂ ಜೀವ ಇರುತ್ತದಲ್ಲ, ಅವುಗಳನ್ನು ಮಾತ್ರ ಹೇಗೆ ತಿನ್ತೀರಾ? ಅವಕ್ಕೆ ಹಿಂಸೆ ಆಗಲ್ವಾ?"
ಅವನಿಗೆ ಉತ್ತರ ನೀಡಲು ಹೀಗೆ ಸಿದ್ದಪದಿಸಿಕೊಂಡಿದ್ದೆ-"ಜಗತ್ತಿನಲ್ಲಿ ಎಲ್ಲಾ ಸಸ್ಯಹಾರಿಗಳೂ ಮಾಮ್ಸಹಾರಿಗಳಾದರೆ ಅಥವಾ ಎಲ್ಲಾ ಮಾಮ್ಸಹಾರಿಗಳೂ ಸಸ್ಯಹಾರಿಗಳಾದರೆ ನೈಸರ್ಗಿಕ ಆಹಾರ ಕ್ರಮದಲ್ಲಿ ಅಸಮತೋಲನವಾಗುತ್ತದೆ. ಅದು ಸಾಧ್ಯವಿಲ್ಲ. ಜಗತ್ತಿನ ಪ್ರಾಕೃತಿಕ ನಿಯಮಗಳನ್ನು ಮುರಿಯಬಾರದು. ಎಲ್ಲರೂ ತಮಗಿಷ್ಟ ಬಂದಂತೆ, ತಮಗಿಷ್ಟ  ಬಂದಿದ್ದನ್ನು ತಮಗಿಷ್ಟವಾದ ಹಾಗೆ ತಿನ್ನುತ್ತಿರಬೇಕು, ತಮ್ಮಿಷ್ಟದ ಪ್ರಕಾರ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು".
ಆದರೆ ಕೇಳಿಸಿಕೊಳ್ಳಲು ಅವನೇ ಇಲ್ಲಾ...